ಯಕ್ಷಪ್ರಶ್ನೆ

ವಾಸು ಪೋತದಾರ

ಒಮ್ಮೆ ಯೋಚಿಸಿದೆ
ಈ ಜಗದ ಆದಿ-ಅನಾದಿಗಳ ಕುರಿತು

ಆಗ ವಿಜ್ಞಾನಿಗಳು ಹೇಳಿದರು -

"ಈ ಭೂಮಿ ಸೂರ್ಯನ ಒಂದು ತಣ್ಣಗಾದ ತುಣುಕು,
ಇಲ್ಲಿನ ಜೀವಸಂಕುಲ ಅಮೀಬಾದ ವಂಶವೈವಿಧ್ಯ"
ವೈದಿಕರೆಂದರು - "ಅಲ್ಲಲ್ಲ, ಇದು ಮನುಕುಲ,
ಈ ಬ್ರಹ್ಮಾಂಡ ಭಗವಂತನ ಸೃಷ್ಟಿ"

ಮತ್ತೊಂದು ಸಂಶಯ ಮೊಳೆಯಿತು -
ಕೇಳಿದೆ - ಅದಿರಲಿ, ಈ ವಿಶ್ವದ ಆರಂಭ ಹೇಗಾಯಿತೆಂದು?

ಕನ್ನಡಕವನ್ನೇರಿಸುತ್ತ ವಿಜ್ಞಾನಿಗಳೆಂದರು -

"ಇನ್ನೂ ಯೋಚಿಸುತ್ತಿದ್ದೇವೆ"
ಜುಟ್ಟನ್ನು ನೀವುತ್ತ ಪಂಡಿತರು ಬೀಗಿದರು -
"ಇದು ಭಗವಂತನ ಮಹಿಮೆ,
ಮತ್ತೆ ಮುಂದೆ ಆತನ ಹುಟ್ಟಿನ ಕುರಿತು ಕೇಳೀರೋ ಜೋಕೇ?
ಆತ ಆದ್ಯಂತರಹಿತ"

ನಾಸ್ತಿಕರಾದ ವಿಜ್ಞಾನಿಗಳು ಗುಡುಗಿದರು -

"ಭಗವಂತ ಭಗವಂತ! ಅದು ನಿಮ್ಮ ಭ್ರಮೆ,
ನಿಮ್ಮನ್ನು ನಂಬಲು ವಿಜ್ಞಾನಕ್ಕೆ ಪ್ರಮಾಣ ಬೇಕು"

ಮಂದಸ್ಮಿತ ಪಂಡಿತರ ಉವಾಚ -
"ನಿಮ್ಮನ್ನು ನಂಬಲು ನಮಗೆ ಖಚಿತ ಉತ್ತರ ಬೇಕು"

ನಿಜವೆನಿಸಿತು, ಖಚಿತ ಉತ್ತರವಿಲ್ಲದ ವಿಜ್ಞಾನವನು ನಂಬುವದು ಹೇಗೆ?
ಆದರೆ ನೆನಪಾಯಿತು ಆಗ
ದಿನನಿತ್ಯದ ನಮ್ಮ ಬಾಳಿನಲಿ ವಿಜ್ಞಾನದ ಕೊಡುಗೆ
ಯೋಚಿಸಿದೆ ಯಾವುದು ಸರಿಯೆಂದು
ಹೊಳೆಯಲಿಲ್ಲ!

ಕೊನೆಗೆ -

ಸೃಷ್ಟಿಸಿದ ಭಗವಂತನಿಗೆ ಕೈಮುಗಿದು,
ವಿಜ್ಞಾನದ ಕೊಡುಗೆಗೆ ಕೃತಜ್ಞತೆ ಸಲ್ಲಿಸಿ,
ಸುಮ್ಮನಾದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ