ದೀಪಾವಳಿ - ರಾಜ್ಯೋತ್ಸವ ವರದಿ

                                                                                                             ರೇಖಾ ಪ್ರಕಾಶ್

"ಸಂಭ್ರಮ ಸಡಗರದಿಂದ ತುಂಬಿ ತುಳುಕಿದ ಕನ್ನಡದ ಕಂಪನ್ನು ಪಸರಿಸಿ ಆಚರಿಸಿದ ಕನ್ನಡ ರಾಜ್ಯೋತ್ಸವ
                                            ಮತ್ತು
   ದೀಪಗಳ ಜ್ಯೋತಿಯನ್ನು ಬೆಳಗಿ, ಜ್ಞಾನದ ಬೆಳಕಿನೆಡೆ ನಡೆದು ಆಚರಿಸಿದ ದೀಪಾವಳಿ ಹಬ್ಬ”.       

ಸಂಭ್ರಮದ ದೀಪಾವಳಿ ಹಬ್ಬದ ದೀಪಗಳ ಜ್ಯೋತಿಯು ಮತ್ತೊಮ್ಮೆ ನಮ್ಮ ಮಲ್ಲಿಗೆ ಕನ್ನಡ ಸಂಘದಲ್ಲಿ ಬೆಳಗಿತು. ಈ ಬಾರಿಯ ದೀಪಾವಳಿ ಹಬ್ಬದ ಆಚರಣೆ “ ದಿ ಐಸ್ಮನ್ ಸೆಂಟರ್ ಆಫ್ ಆರ್ಟ್ಸ್ " ನಲ್ಲಿ ವಿಜೃಂಭಣೆಯಿಂದ ನಡೆಯಿತು.

    “ ತೋರಣದ  ತಳಿರಲ್ಲಿ, ಹೊಸಿಲ ಹಣತೆಗಳಲಿ

       ಬಾಣ ಬಿರುಸುಗಳಲ್ಲಿ ನಲಿವು ಮೂಡಿ ..

      ಕತ್ತಲೆಯ ಪುಟಗಳಲಿ ಬೆಳಕಿನ ಅಕ್ಷರಗಳಲಿ

       ದೀಪಗಳ ಸಂದೇಶ ಥಳಥಳಿಸಲಿ....

      ಬೆಳಕಿನ ಅಸ್ತಿತ್ವವನೆ ಅಣಕಿಸುವ ಕತ್ತಲೆಗೆ

       ತಕ್ಕ ಉತ್ತರವಿಲ್ಲಿ ಕೇಳಿ ಬರಲಿ”

 “ದೀಪಾವಳಿಯ ಜ್ಯೋತಿ ಅಭಯ ಹಸ್ತವನೆತ್ತಿ ಎಲ್ಲರಿಗೂ ಎಲ್ಲಕ್ಕೂ  ಶುಭಕೋರಲಿ”

 ಅಂಧಕಾರವ ತೊಲಗಿಸಿ ಜ್ಞಾನದ ದೀವಿಗೆಯ ಹಚ್ಚಿ ಬೆಳಕಿನೆಡೆಗೆ ದಾರಿ ತೋರುವ ನಮ್ಮ ದೀಪಾವಳಿಯ ಹಬ್ಬವನ್ನು ಮತ್ತು ಕನ್ನಡದ ಧ್ವಜಕ್ಕೆ ಗೌರವವನ್ನುತೋರಿ, ಕನ್ನಡದ ನಡೆ ನುಡಿಯನ್ನು ಎತ್ತಿ ತೋರಿ, ಕನ್ನಡದ ಪ್ರೇಮವನು ಸವಿದು , ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಿಸಿದ ನಮ್ಮ ಮಲ್ಲಿಗೆ ಕನ್ನಡ ಸಂಘಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು.  “ ಬೆಳಗು ಬಾ ಹಣತೆಯನು, ಬೆಳಗು ಬಾ ಜ್ಯೋತಿಯನು ಎದೆಯ ಮಂದಿರದಲ್ಲಿ, ಜಗಕೆ ಬೆಳಕಾಗುವೀ ಶುಭ ಘಳಿಗೆಯಲ್ಲಿ, ದಿವ್ಯ ದೀಪಾವಳಿಯ ಶುಭ ಲಗ್ನದಲ್ಲಿ"  ಅನ್ನುವ ಕವಿಯೋಕ್ತಿಯಂತೆ ಎಲ್ಲರೂ  ಸಾಲಂಕೃತ ಅಲಂಕಾರದಿಂದ ಸಿಂಗರಿಸಿಕೊಂಡು, ಹೆಜ್ಜೆ ಹೆಜ್ಜೆಗೆ ಸಾಲು ಸಾಲು ದೀಪ ಬೆಳಗಿ , ಜ್ಞಾನದಬೆಳಕು ನೀಡಲೆಂದು ಬೇಡಿ, ಸಂತೋಷದಿಂದ ಆಚರಿಸಿದ ಈ ಹಬ್ಬವು ಎಲ್ಲರ ಮನಸಿನಲ್ಲಿ ಉತ್ಸಾಹದ ಚಿಲುಮೆಯನ್ನು ಎಬ್ಬಿಸಿತೆಂದರೆ ಆಶ್ಚರ್ಯವಿಲ್ಲ .

 ಈ ಬಾರಿಯ ಹಬ್ಬದ ವಿಶೇಷತೆ ಏನೆಂದರೆ ಈ ಕಾರ್ಯಕ್ರಮವು ಉತ್ತರ ಕರ್ನಾಟಕದ ಸೊಬಗನ್ನು ಎತ್ತಿಹಿಡಿದಿತ್ತು. ಹಬ್ಬದ ಆರಂಭವನ್ನು ನಮ್ಮ ಧಾರವಾಡದ ಬೆಡಗಿ ಅನುಬೆನಕಟ್ಟಿಯವರು ಉತ್ತರ ಕರ್ನಾಟಕದ ಮಾತಿನ ಶ್ಯಲಿಯಲ್ಲೇ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಅದರ ಸೊಬಗು ಜೇನು ಸಕ್ಕರೆ ಬೆರೆತಂತೆ ಮಧುರವಾಗಿತ್ತು. ಕುಂದಾ, ಪೇಡಗಳ ಸಿಹಿ ರುಚಿಯನ್ನು ಅವರ ಮಾತಿನಲ್ಲೇ ಬೆರೆಸಿ ಎಲ್ಲರಿಗೂ ಹಂಚಿದಂತಿತ್ತು ಆ ಭಾಷೆಯ ಸೊಬಗು. 

 ಈ ದೀಪಾವಳಿ ಮತ್ತು ರಾಜ್ಯೋತ್ಸವದಲ್ಲಿ , ಡಲ್ಲಾಸ್ ಕನ್ನಡಿಗರಿಗೆ ಬಹು ಸಂತೋಷ ಕೊಟ್ಟ ವಿಷಯವೇನೆಂದರೆ ಮುಂದಿನ ೧೦ನೇ “ಅಕ್ಕ“ ಕನ್ನಡ ಸಮ್ಮೇಳನ ೨೦೧೮ , ನಮ್ಮ ಈ ಸುಂದರ ಡಲ್ಲಾಸ್  ನಗರದಲ್ಲಿ ನಡೆಸಲು ನಿಶ್ಚಯಿಸಿದೆಯೆಂದು “ ಅಕ್ಕ” ಛೇರ್ಮನ್ ,  ಶ್ರೀ.ಅಮರ್ ನಾಥ್ ಗೌಡ ಅವರು ಘೋಷಿಸಿದಾಗ , ಅತ್ಯಂತ ಉತ್ಸುಕರಾದ  ನಮ್ಮ ಕನ್ನಡಿಗರೆಲ್ಲರೂ ತುಂಬು ಹೃದಯದಿಂದ  ತಮ್ಮ  ಸಂತೋಷವನ್ನು ಚಪ್ಪಾಳೆಯ ಸದ್ದಿನಿಂದ ಸಭಾಂಗಣವನ್ನು ತುಂಬಿಸಿದರು. ನಮ್ಮ ಮಲ್ಲಿಗೆ ಕನ್ನಡ ಸಂಘ, ಶ್ರೀ. ಶ್ರೀವತ್ಸ ರಾಮನಾಥರವರ ನೇತೃತ್ವದಲ್ಲಿ ಯಶಸ್ವೀ ಹೆಜ್ಜೆ ಮುಂದೆ ಮುಂದೆ ಇಡುತ್ತಿದೆಯೆಂದರೆ  ಎಲ್ಲ ಕನ್ನಡಿಗರಿಗೂ ಹೆಮ್ಮೆಯ ವಿಷಯ.“ ಬನ್ನಿ  ಬನ್ನಿ ಬನ್ನಿ” ಡಲ್ಲಾಸ್ ಕನ್ನಡಿಗರೇ , ಎಲ್ಲರೂ ಸೇರಿ ಒಂದಾಗಿ ಕನ್ನಡದ ಕಂಪನ್ನು ಡಲ್ಲಾಸ್ನಲ್ಲಿ ಮುಂಬರುವ “ ಅಕ್ಕ” ಕಾರ್ಯಕ್ರಮದಲ್ಲಿ ಬೀರೋಣ. 

 ಈ ಬಾರಿ ಕಾರ್ಯಕ್ರಮಕ್ಕೆ ಮುದ್ದು ಮಕ್ಕಳಿಗೆ ಪ್ರಾಧಾನ್ಯ ನೀಡಿ, ಅವರಿಗೆ ಕನ್ನಡ ಭಾಷಾಪ್ರೇಮವನ್ನು ತೋರುವಂತೆ ಮಾಡಿದ್ದು , ಮಲ್ಲಿಗೆಸಂಘದ ಬಗ್ಗೆ ಹೆಮ್ಮೆ ಪಡುವಂತಾಯಿತು." ಎಂದೆಂದಿಗೂ ನೀ ಕನ್ನಡವಾಗಿರು” ಕನ್ನಡ ಗೋವಿನ ಓ ಮುದ್ದಿನ ಕರು,ಕನ್ನಡವೊಂದಿದ್ದರೆ ನೀ ನಮಗೆ ಕಲ್ಪತರು",  ಎನ್ನುವಂತೆ ಇತ್ತು. ಪುಟ್ಟ ಪುಟ್ಟ ಹೆಜ್ಜೆಯನಿಟ್ಟು ಮುಂದೆ ಮುಂದೆ ನಡೆಯಲು ಮುದ್ದುಮಕ್ಕಳಿಗೆ ಪ್ರೇರಣೆ ಮಾಡಿದ್ದು ಮನಸಿಗೆ ಮುದ ಕೊಟ್ಟಿತ್ತು. ಪುಟ್ಟು ಪುಟಾಣಿಗಳ ಸುಮಧುರ ಕನ್ನಡದ ಭಾವಗೀತೆಗಳು, ಚಿತ್ರಗೀತೆಗಳು, ಜಾನಪದ ಗೀತೆಗಳು, ದೇಶ ಭಕ್ತಿ ಗೀತೆಗಳು, ಶಾಸ್ತ್ರೀಯ ನೃತ್ಯಗಳು , ಈಗಿನಕಾಲದ ನವೀನ ರೀತಿಯ ನೃತ್ಯಗಳು, ಎಷ್ಟು  ಚೆನ್ನಾಗಿ ಮೂಡಿಬಂತೆಂದರೆ , ಸಭಿಕರೆಲ್ಲರೂ ಚಪ್ಪಾಳೆ ತಟ್ಟಿ ಪುಟಾಣಿಗಳನ್ನು ಪ್ರೋತ್ಸಾಹಿಸಿದರು.

 ಅತಿ ಸುಂದರವಾಗಿ ವರ್ಣಿಸಿ ನೃತ್ಯ ರೂಪಕವಾಗಿ ತೋರಿಸಿದ ಪಂಚಭೂತಗಳ ಪರಿಚಯ, ಹವನ ಮಾಡಿ ಅಗ್ನಿದೇವನನ್ನು ಕರೆದ ರೀತಿ, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಧಾರೆ ಎರೆದಂತಿತ್ತು. ಮುದ್ದಿನ ಮಕ್ಕಳಿಗೆ ಸುಗಮ ಸಂಗೀತ “ ಎಲೆ ಗಳು ನೂರಾರು ಭಾವದ ಎಳೆಗಳು ನೂರಾರು” ಎಂಬ ಅರ್ಥ ಪೂರ್ಣ,ದೀರ್ಘ ಗೀತೆಯನ್ನು ಬಾಯಿಪಾಠ ಮಾಡಿಸಿ ಶ್ರುತಿ, ತಾಳ ಬದ್ದವಾಗಿ ಹಾಡಿಸಿದ್ದಲ್ಲದೆ, ಮಕ್ಕಳಿಗೆ ಕವನದ ಬಗ್ಗೆ ಅಭಿಮಾನ ಮೂಡಿಸಿದ್ದು , ಸಭಿಕರೆಲ್ಲರಿಗೂ ಖುಷಿಕೊಟ್ಟ ವಿಷಯ.  ದೇಶಭಕ್ತಿ ಗೀತೆ “ ಜೈ ಭಾರತ ಜನನಿಯ ತನುಜಾತೇ “ ಹಾಡಿನಲ್ಲಿ ಸಂಸ್ಕೃತಿಯನ್ನು ಎತ್ತಿ ತೋರಿಸುವ ಡೋಲು ಕುಣಿತ, ಕಂಸಾಳೆ ಪದ,ಯಕ್ಷಗಾನ , ಎಲ್ಲ ರೀತಿಯ ನೃತ್ಯಗಳ ಸೊಬಗನ್ನು ಸೇರಿಸಿ , ಸಂಗೀತ ಮತ್ತು ನೃತ್ಯ ಸಮ್ಮಿಶ್ರಣ ಮಾಡಿ, ಅದರ ಸವಿಯನ್ನು ಒಟ್ಟೊಟ್ಟಿಗೆ ಸಭಿಕರಿಗೆ ರಸದೌತಣ ಮಾಡಿಸಿದ್ದಲ್ಲದೆ , ಪುಟ್ಟ ಮಕ್ಕಳಿಗೆ ಭಾರತ ದೇಶದ ಬಗ್ಗೆ ಒಲವು ಮೂಡಿಸಿದ್ದು, ಅತ್ಯದ್ಭುತ ಪ್ರಯತ್ನ. ಕನ್ನಡದ ಹಳೆಯ ಸುಮಧುರ ಚಿತ್ರ ಗೀತೆಗಳನ್ನೊಳಗೊಂಡ ಮಕ್ಕಳ ಮತ್ತು ಅಮ್ಮಂದಿರ ನೃತ್ಯರೂಪಕ , ಸುಂದರ ರಸ ಸಂಜೆಗೆ ಹಲವಾರು ರಂಗು ಕೊಟ್ಟು  ಸುಂದರತೆಯನ್ನು ಹೆಚ್ಚಿಸಿ ಎಲ್ಲರ ಮನಸೆಳೆಯಿತು. ಹಲವಾರು ನೃತ್ಯ, ಸಂಗೀತ, ನಾಟಕಗಳು ಹಬ್ಬಕ್ಕೆ ರಂಗೇರಿಸಿ, ಮನಕ್ಕೆ ಮುದವೇ ರಿಸಿ, ರಾಜ್ಯೋತ್ಸವಕ್ಕೆ ಹೊಸ ರೂಪವನ್ನೇ ಕೊಟ್ಟು, ಮಲ್ಲಿಗೆ ಕನ್ನಡಸಂಘದ ಹೆಮ್ಮೆಯನ್ನುಹೆಚ್ಚಿಸಿತು. 

 ನಮ್ಮ ಕರ್ನಾಟಕದ ಹೆಮ್ಮೆಯ ಗಾಯಕರಾದ ಶ್ರೀ. ಗಣೇಶ್ ದೇಸಾಯಿಯವರ ಸುಗಮ ಸಂಗೀತ , ರಸಸಂಜೆಗೆ ಇಂಪು ತುಂಬಿಸಿ ಕಾಮನಬಿಲ್ಲಿನ ರಂಗಿನ ಬೆಡಗು ಮೂಡಿಸಿತು. ಅವರ ಸುಮಧುರ ಕಂಠದಿಂದ ಹೊರ ಹೊಮ್ಮಿದ “ ಹರಿ ಕುಣಿದಾ ನಮ್ಮ ಹರಿ ಕುಣಿದಾ” ಎಲ್ಲರನ್ನೂ ಸಂಗೀತದ ಅಲೆಯಲ್ಲಿ ಕುಣಿಸಿತು.ಅವರು ಬರೀ ಸಂಗೀತವಲ್ಲದೆ ಸಾಹಿತ್ಯವನ್ನು ವರ್ಣಿಸಿ, ಎಲ್ಲರಿಗೂಅರ್ಥಮಾಡಿಸಿ , ಹಾಡು ಹೇಳುವ ರೀತಿ ಅತ್ಯದ್ಭುತ ..... “ಕೋಡಗನ ಕೋಳಿ ನುಂಗಿತ್ತ ತಂಗೀ” ಹಾಡಿಗೆ ಎಲ್ಲರೂ ಆನಂದಗೊಂಡು , ಅವರ ಜೊತೆಗೂಡಿ ತಾಳ ಹಾಕಿ ನಲಿದು ನಾಟ್ಯವಾಡಿದ್ದು , ಅವರ ಕಂಠ ಸಿರಿಯನ್ನು  ಅನುಭವಿಸಿದ್ದಕ್ಕೆ ಸಾಕ್ಷಿಯಾಗಿತ್ತು. ಶ್ರೀ  ದೇಸಾಯಿಯವರಿಗೆ ನಮ್ಮೆಲ್ಲರ ಹೃದಯ ಪೂರ್ವಕ ಅಭಿನಂದನೆಗಳು. 

 ದೀಪಾವಳಿಯ ಉತ್ತರ ಕರ್ನಾಟಕದ ವಿಶೇಷ  ಊಟವಂತೂ ಎಲ್ಲರಿಗೂ ರಸ ದೌತಣವಾಗಿತ್ತು. ಅಂತೂ ಕಣ್ಣಿಗೆ ಹಬ್ಬ, ಕಿವಿಗೆ ಇಂಪು, ಸೊಗಸಾದ ಭೋಜನ, ಎಲ್ಲವು ಸೇರಿ , ನಮ್ಮ ಕನ್ನಡಿಗರಿಗೆ ಮರೆಯದ ದೀಪಾವಳಿ ಆಯಿತು. ಗೆಳೆಯರೇ , ಗೆಳತಿಯರೆ , ಮುಂದಿನ ಹಬ್ಬ ಆಚರಿಸುವವರೆಗೂ ಕಾಯೋಣವೇ? 

“ ಜೈ ಕರ್ನಾಟಕ, ಜೈ ಮಲ್ಲಿಗೆ ಕನ್ನಡ ಸಂಘ”

 ಧನ್ಯವಾದಗಳು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ